ಶಸ್ತ್ರಚಿಕಿತ್ಸೆ ಇಲ್ಲದೆ ಸಂಧಿವಾತ ನಿವಾರಣೆ ಸಾಧ್ಯ: ಡಾ.ವೀರೇಂದ್ರ ಭಸ್ಮೆ

ಹುಬ್ಬಳ್ಳಿ: ಸಂಧಿವಾತ ಎಂದರೆ ಶಾಶ್ವತ ನೋವು ಅಥವಾ ಅಸಹಾಯಕ ಬದುಕು ಎಂದುಕೊಳ್ಳಬೇಕಾಗಿಲ್ಲ. ಸರಿಯಾದ ಸಮಯದಲ್ಲಿ ಜಾಗೃತಿ, ಜೀವನಶೈಲಿ ಬದಲಾವಣೆ ಮತ್ತು ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬಳಸಿಕೊಂಡಲ್ಲಿ, ಸ್ವತಂತ್ರ ಓಡಾಡುವುದರ ಜೊತೆಗೆ ದೈನಂದಿನ ಜೀವನವನ್ನು ಸುಲಭವಾಗಿ ನಡೆಸಬಹುದು ಎಂದು ಸಂಧಿ ಬದಲಾವಣೆ ಶಸ್ತ್ರಚಿಕಿತ್ಸಕ ಡಾ. ವೀರೇಂದ್ರ ಭಸ್ಮೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಅಕ್ಟೋಬರ್ 12ರಂದು ವಿಶ್ವ ಸಂಧಿವಾತ ದಿನ ಆಚರಿಸಲಾಗುತ್ತದೆ. ’ಇದು ನಿಮ್ಮ ಕೈಯಲ್ಲಿ ಇದೆ, ಕ್ರಮ ಕೈಗೊಳ್ಳಿ’ ಎನ್ನುವುದು 2025ರ ಧ್ಯೇಯವಾಕ್ಯವಾಗಿದೆ. ಇದರ ಮೂಲಕ ಸಂಧಿವಾತ ನಿರ್ವಹಣೆಯ ಜವಾಬ್ದಾರಿ ವೈದ್ಯರಷ್ಟೇ ಅಲ್ಲ, ರೋಗಿಗಳು, ಕುಟುಂಬ ಹಾಗೂ ಸಮುದಾಯಗಳ ಮೇಲೂ ಇದೆ ಎಂದು ಹೇಳಿದರು.
ಮೊಣಕಾಲಿನ ಆಸ್ಟಿಯೋಆರ್ಥ್ರೈಟಿಸ್ನಲ್ಲಿ ಮೊಣಕಾಲಿನ ಹೋಳಾದ ಕಾರ್ಟಿಲೇಜ್ ಹಾಳಾಗುತ್ತಾ ಹೋಗುತ್ತದೆ. ಇದರಿಂದ ನೋವು, ಗಟ್ಟಿತನ, ಊತ ಹಾಗೂ ಚಲನೆಯಲ್ಲಿನ ಅಡಚಣೆ ಉಂಟಾಗುತ್ತದೆ ಎಂದು ತಿಳಿಸಿದರು.
ನಿತ್ಯದ ಸರಳ ಚಟುವಟಿಕೆಗಳು, ಕುರ್ಚಿಯಿಂದ ಎದ್ದು ನಿಲ್ಲುವುದು, ಮೆಟ್ಟಿಲೇರುವುದು, ಅಸಮ ನೆಲದಲ್ಲಿ ನಡೆಯುವುದು ಕೂಡ ನೋವು ಹಾಗೂ ಶ್ರಮಕಾರಿ ಕಾರ್ಯಗಳಾಗುತ್ತವೆ. ಇದರಿಂದ ದೈನಂದಿನ ಚಟುವಟಿಕೆ ಕಡಿಮೆಯಾಗುವುದು, ಆತ್ಮವಿಶ್ವಾಸ ಕಳೆದುಕೊಳ್ಳುವುದು ಹಾಗೂ ಏಕಾಂಗಿ ಬದುಕು ನಡೆಸುವ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದರು.
ಶಸ್ತ್ರಚಿಕಿತ್ಸೆ ಇಲ್ಲದೆ ನಿರ್ವಹಣೆ: ಆರಂಭಿಕ ಹಂತದ ಆಸ್ಟಿಯೋಆರ್ಥ್ರೈಟಿಸ್ನಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೇ ನಿರ್ವಹಣೆ ಸಾಧ್ಯ ಎಂದು ಭಸ್ಮೆ ತಿಳಿಸಿದರು.
ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು, ಹಸಿರು ಎಲೆ ತರಕಾರಿಗಳು, ಬೆರ್ರಿಗಳು, ಕಡಲೆಕಾಯಿ, ದಾಳಿಂಬೆ, ಹೆಚ್ಚಿನ ಫೈಬರ್ಯುಕ್ತ ಆಹಾರ ಸೇವನೆ, ಅಸ್ಥಿಬಲಕ್ಕೆ ಬೇಕಾದ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸರಿಯಾದ ಪ್ರಮಾಣದಲ್ಲಿ ಪಡೆಯುವುದು, ದೇಹಭಾರ ನಿಯಂತ್ರಣದಲ್ಲಿ ಇಡುವುದು, ನಡೆಯುವುದು, ಈಜುವುದು, ಸೈಕ್ಲಿಂಗ್ ಮುಂತಾದ ಕಡಿಮೆ ಒತ್ತಡದ ವ್ಯಾಯಾಮಗಳು, ಯೋಗ ಮತ್ತು ಧ್ಯಾನದಂತಹ ಅಭ್ಯಾಸಗಳಿಂದ ಸ್ನಾಯು ನೋವು ನಿವಾರಣೆ, ಧೂಮಪಾನ ತ್ಯಜಿಸುವುದು, ಮಧ್ಯಮ ಹಂತದಲ್ಲಿ ಹೈಯಲುರೋನಿಕ್ ಆಮ್ಲ ಅಥವಾ ಪ್ಲಾಸ್ಮಾ ರಿಚ್ ಪ್ಲೇಟ್ಲೆಟ್ (PRP) ಇಂಜೆಕ್ಷನ್ಗಳಂತಹ ವಿಧಾನಗಳನ್ನೂ ಪ್ರಯತ್ನಿಸಬಹುದು ಎಂದು ವಿವರಿಸಿದರು.
ಶಸ್ತ್ರಚಿಕಿತ್ಸೆಯ ಅಗತ್ಯತೆ: ಆಸ್ಟಿಯೋಆರ್ಥ್ರೈಟಿಸ್ ತೀವ್ರಗೊಂಡು ಸಹಿಸಲಾಗದ ಮಟ್ಟಿಗೆ ನೋವು, ನಡೆಯುವ ಅಥವಾ ದೈನಂದಿನ ಬದುಕಿನ ಸಾಮರ್ಥ್ಯ ಹಾಳಾದಾಗ, ಮೊಣಕಾಲಿನ ಸಂಪೂರ್ಣ ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ (Total Knee Replacement TKR) ಉತ್ತಮ ಪರಿಹಾರ. ಇದು ನೋವು ನಿವಾರಣೆ, ಎಲುಬಿನ ಸರಿಯಾದ ಹೊಂದಾಣಿಕೆ, ಸ್ಥಿರತೆ ಹಾಗೂ ಸ್ವತಂತ್ರ ಜೀವನ ನಡೆಸಲು ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಸುಲಭದ ಶಸ್ತ್ರಚಿಕಿತ್ಸೆ
ಇತ್ತೀಚೆಗೆ 68 ವರ್ಷದ ಮಹಿಳೆಯೊಬ್ಬರು ತೀವ್ರ ಮೊಣಕಾಲಿನ ಆಸ್ಟಿಯೋಆರ್ಥ್ರೈಟಿಸ್ನಿಂದಾಗಿ ಓಡಾಡಲು ಆಗದ ಸ್ಥಿತಿಯಲ್ಲೇ ಬದುಕುತ್ತಿದ್ದರು. ಭ್ರಮೆ ಮತ್ತು ಭಯಗಳಿಂದ ಸುಮಾರು 5 ವರ್ಷ 8 ತಿಂಗಳು ಶಸ್ತ್ರಚಿಕಿತ್ಸೆ ಮುಂದೂಡುತ್ತಿದ್ದರು. ಆದರೆ, ನಾನು 101 ವರ್ಷದ ಹಿರಿಯ ನಾಗರಿಕರ ಯಶಸ್ವಿ ಶಸ್ತ್ರಚಿಕಿತ್ಸೆಯ ಮಾಡಿರುವ ಕುರಿತು ಸುದ್ದಿಯನ್ನು ಓದಿದ ನಂತರ ಧೈರ್ಯ ಪಡೆದು ಶಸ್ತ್ರಚಿಕಿತ್ಸೆಗೆ ಮುಂದಾದರು. ಆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿತು. ಇಂದು ಅವರು ಮತ್ತೆ ತಮ್ಮ ಕಾಲಿನ ಮೇಲೆ ನಡೆಯುತ್ತಿದ್ದಾರೆ. ಸ್ವತಂತ್ರ ಜೀವನಕ್ಕೆ ಮರಳಿದ್ದಾರೆ ಎಂದು ಡಾ.ವೀರೇಂದ್ರ ಭಸ್ಮೆ ತಿಳಿಸಿದರು.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಹುಬ್ಬಳ್ಳಿಯ ವಿವೇಕಾನಂದ ಜನರಲ್ ಆಸ್ಪತ್ರೆಯು ವಯೋವೃದ್ಧ ರೋಗಿಗೆ ಯಶಸ್ವಿಯಾಗಿ ಸಂಪೂರ್ಣ ಮೊಣಕಾಲು ಬದಲಾವಣೆ (ಟೋಟಲ್ ನೀ ರೀಪ್ಲೇಸ್ಮೆಂಟ್) ಶಸ್ತ್ರಚಿಕಿತ್ಸೆ ನಡೆಸಿ ಹೊಸ ದಾಖಲೆ ನಿರ್ಮಿಸಿದೆ. ಆರ್ಥೋಪೀಡಿಕ್ ತಜ್ಞರಾದ ಡಾ. ವೀರೇಂದ್ರ ಭಾಸ್ಮೆ ಅವರ ನೇತೃತ್ವದಲ್ಲಿ ವೈದ್ಯರ ತಂಡವು ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ರೋಗಿಯು 1924ರ ಜೂನ್ 19ರಂದು ಜನನ ಹೊಂದಿದ ೧೦೦ ವರ್ಷದ ವೃದ್ಧನಾಗಿದ್ದನು. ಶಸ್ತ್ರಚಿಕಿತ್ಸೆ 2025ರ ಜನವರಿ ೧೬ರಂದು ನೆರವೇರಿಸಲ್ಪಟ್ಟಿತು.
ಈ ಸಾಧನೆಗೆ ಮಾನ್ಯತೆ ದೊರೆತಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ದಾಖಲಾಗಿರುವ ಪ್ರಮಾಣಪತ್ರವನ್ನು 2025ರ ಏಪ್ರಿಲ್ 17ರಂದು ನೀಡಲಾಯಿತು.
ದಾಖಲೆ ಪ್ರಕಾರ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡು, ಅದು ಭಾರತದ ಅತ್ಯಂತ ವಯೋವೃದ್ಧ ರೋಗಿಯ ಮೇಲೆ ನಡೆದ ಯಶಸ್ವಿ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆಯಾಗಿ ಪರಿಗಣಿಸಲ್ಪಟ್ಟಿದೆ ಎಂದು ತಿಳಿಸಿದರು.



