ಸಂಪಾದಕೀಯ

ಸಂಘ ಕತಾರ್ ವತಿಯಿಂದ ಆಯೋಜಿಸಲಾದ ‘ಸಂಭ್ರಮ 2026’ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಶ್ರೀ ರಾಜೇಶ್ ಕೃಷ್ಣನ್.

ಕತಾರ್ ಕನ್ನಡಿಗರ ಪರವಾಗಿ ಕರ್ನಾಟಕ ಸಂಘ ಕತಾರ್ ವತಿಯಿಂದ ಆಯೋಜಿಸಲಾದ ‘ಸಂಭ್ರಮ 2026’ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಶ್ರೀ ರಾಜೇಶ್ ಕೃಷ್ಣನ್ ಅವರಿಗೆ ಪ್ರತಿಷ್ಠಿತ “ಸ್ವರ ಯೋಗಿ” ಗೌರವ ಬಿರುದನ್ನು ಪ್ರದಾನಿಸಿ ಸನ್ಮಾನಿಸಲಾಯಿತು.

ದೋಹಾ: ಕರ್ನಾಟಕ ಸಂಘ ಕತಾರ್ (ಕೆಎಸ್‌ಕ್ಯೂ) ವತಿಯಿಂದ ಅಲ್ ವಕ್ರಾ ನಗರದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ ಆಯೋಜಿಸಲಾದ ಭವ್ಯ ‘ಸಂಭ್ರಮ 2026’ ಸಾಂಸ್ಕೃತಿಕ ಮಹೋತ್ಸವದಲ್ಲಿ, ಇಡೀ ಕತಾರ್ ಅನಿವಾಸಿ ಕನ್ನಡಿಗರ ಪರವಾಗಿ ಖ್ಯಾತ ಹಿನ್ನೆಲೆ ಗಾಯಕ ಹಾಗೂ “ಮೆಲೋಡಿ ಕಿಂಗ್” ಶ್ರೀ ರಾಜೇಶ್ ಕೃಷ್ಣನ್ ಅವರಿಗೆ ಪ್ರತಿಷ್ಠಿತ “ಸ್ವರ ಯೋಗಿ” ಗೌರವ ಬಿರುದು ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕತಾರ್ ದೇಶದ ಭಾರತೀಯ ರಾಯಭಾರಿ ಘನತೆವೆತ್ತ ಶ್ರೀ ವಿಪುಲ್, ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ ಶ್ರೀ ಸಂದೀಪ್ ಕುಮಾರ್ ಹಾಗೂ ಪ್ರಥಮ ಕಾರ್ಯದರ್ಶಿ ಶ್ರೀ ಹರೀಶ್ ಪಾಂಡೆ ಉಪಸ್ಥಿತರಿದ್ದರು.
ಇವರೊಂದಿಗೆ ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ಅಧ್ಯಕ್ಷ ಶ್ರೀ ಎ.ಪಿ. ಮಣಿಕಂಠನ್, ಖತಾರ್ ಆಟೋ ಮ್ಯೂಸಿಯಂ ಆಡಳಿತ ವಿಭಾಗದ ಉಪ ನಿರ್ದೇಶಕಿ ಮಿಸ್ ಫಾತಿಮಾ ಅಲ್ ಮಾದೀದ್ ಹಾಗೂ ಹಿರಿಯ ಪೆಟ್ರೋಲಿಯಂ ಎಂಜಿನಿಯರ್ ಶ್ರೀ ಖಾಲಿದ್ ಅಲ್ ಫಕ್ರೂ ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.
ಈ ವಿಶೇಷ ಸಂದರ್ಭದಲ್ಲಿ ಕರ್ನಾಟಕ ಸಂಘ ಕತಾರ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಲಹೆಗಾರರು ವೇದಿಕೆಯ ಮೇಲೆ ಉಪಸ್ಥಿತರಿದ್ದು ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಿದರು. ಕರ್ನಾಟಕ ಸಂಘ ಕತಾರ್ ತಂಡದ ಸಮನ್ವಯ, ಪರಿಶ್ರಮ ಹಾಗೂ ಸಂಘಟನಾ ಶಕ್ತಿಯಿಂದ ‘ಸಂಭ್ರಮ 2026’ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಯಶಸ್ವಿಯಾಯಿತು.
ವೇದಿಕೆಯ ಮೇಲೆ ವಾಚಿಸಲಾದ ಸನ್ಮಾನ ಪತ್ರದಲ್ಲಿ ಹೀಗೆ ಉಲ್ಲೇಖಿಸಲಾಯಿತು:
“ನಿಮ್ಮ ಸುಮಧುರ ಕಂಠದ ಮಾಧುರ್ಯ, ಭಾವಪೂರ್ಣ ಗಾಯನ ಮತ್ತು ಸಂಗೀತದ ಮೇಲಿನ ಅಪಾರ ನಿಷ್ಠೆಯ ಮೂಲಕ ನೀವು ಕನ್ನಡ ಸಂಗೀತ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ನಿಮ್ಮ ಗಾಯನ ಲಕ್ಷಾಂತರ ಸಂಗೀತಾಭಿಮಾನಿಗಳ ಭಾವನೆಗಳು ಮತ್ತು ನೆನಪುಗಳೊಂದಿಗೆ ಬೆಸೆದುಕೊಂಡಿದೆ. ನಿಮ್ಮ ಕಲಾ ಸಾಧನೆ ಮತ್ತು ಸಂಗೀತ ಪಯಣವನ್ನು ಗೌರವಿಸಿ ಕರ್ನಾಟಕ ಸಂಘ ಕತಾರ್ ವತಿಯಿಂದ ‘ಸ್ವರ ಯೋಗಿ’ ಗೌರವ ಬಿರುದನ್ನು ಪ್ರದಾನಿಸಲು ನಾವು ಹೆಮ್ಮೆಪಡುತ್ತೇವೆ.”
ತಮ್ಮ ಮನಮೋಹಕ ಗಾಯನದ ಮೂಲಕ ಶ್ರೀ ರಾಜೇಶ್ ಕೃಷ್ಣನ್ ಅವರು ಕನ್ನಡ ಸಂಸ್ಕೃತಿಯ ಸುವಾಸನೆಯನ್ನು ಕತಾರ್ ನೆಲದಲ್ಲಿ ಹರಡಿದರು. ಸದಾ ಹಸಿರಾಗಿರುವ ಕನ್ನಡ ಗೀತೆಗಳ ಗಾಯನದ ಮೂಲಕ ಅನಿವಾಸಿ ಕನ್ನಡಿಗರಲ್ಲಿ ತಾಯ್ನಾಡಿನ ನೆನಪುಗಳನ್ನು ಮರುಜೀವಂತಗೊಳಿಸಿದರು. ಕಾರ್ಯಕ್ರಮದ ಅವಧಿಯಿಡೀ ಪ್ರೇಕ್ಷಕರು ಕರತಾಡನ, ಹರ್ಷೋದ್ಗಾರ ಮೂಲಕ ತಮ್ಮ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದರು.
‘ಸಂಭ್ರಮ 2026’ ಕಾರ್ಯಕ್ರಮದಲ್ಲಿ ನಡೆದ ಈ ಐತಿಹಾಸಿಕ ಸನ್ಮಾನವು ಕತಾರ್ ಕನ್ನಡಿಗರ ಸಾಂಸ್ಕೃತಿಕ ಹೆಮ್ಮೆ ಹಾಗೂ ಕನ್ನಡ ಸಂಗೀತದ ಮೇಲಿನ ಅಭಿಮಾನವನ್ನು ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಪ್ರತಿಬಿಂಬಿಸಿದೆ. ಕೃಪೆ

Related Articles

Leave a Reply

Your email address will not be published. Required fields are marked *

Back to top button