ಕನ್ನಡ ಜ್ಯೋತಿ ರಥಯಾತ್ರೆಗೆ ಹುಲಿಹೈದರ್ ನಲ್ಲಿ ಅದ್ದೂರಿ ಸ್ವಾಗತ.ಕನಕಗಿರಿ

ಕನ್ನಡ ಜ್ಯೋತಿ ರಥಯಾತ್ರೆಗೆ ಹುಲಿಹೈದರ್ ನಲ್ಲಿ ಅದ್ದೂರಿ ಸ್ವಾಗತ
ಜ್ಯೋತಿರಥಯಾತ್ರೆಯ ಮೆರವಣಿಗೆಗೆ ಕಲಾತಂಡಗಳ ಸಾಥ್
ಕನಕಗಿರಿ : ತಾಲೂಕಿನ ಹುಲಿಹೈದರ್ ಗ್ರಾಮಕ್ಕೆ ಆಗಮಿಸಿದ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯನ್ನು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ವತಿಯಿಂದ ಸೋಮವಾರ ಆದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ನಡೆಸಲಾಯಿತು.
ನಾಡದೇವಿ ಭುವನೇಶ್ವರಿ ದೇವಿಗೆ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರು ಪೂಜೆ ಸಲ್ಲಿಸಿ ರಥಯಾತ್ರೆಗೆ ಸ್ವಾಗತಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಈ ಸವಿನೆನಪಿಗಾಗಿ ರಾಜ್ಯ ಸರ್ಕಾರವು ಕನ್ನಡ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿ ಹಳ್ಳಿಗೂ ತಲುಪಿಸುವ ಮಹತ್ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ನಂತರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಬಿ ಕಂದಕೂರ್ ಅವರು ಮಾತನಾಡಿ, ಕರ್ನಾಟಕ ಸಂಭ್ರಮ-50ರ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಧ್ಯೇಯ ವಾಕ್ಯದೊಂದಿಗೆ ವರ್ಷವಿಡಿ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕರ್ನಾಟಕದ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದರು.
ಮೆರವಣಿಗೆಗೆ ಕಲಾತಂಡಗಳ ಮೆರಗು: ಇನ್ನೂ ಕನ್ನಡ ರಥಯಾತ್ರೆಯ ಸ್ವಾಗತಕ್ಕೆ ಇಡೀ ಗ್ರಾಮವೇ ಹಬ್ಬದ ರೀತಿಯಲ್ಲಿ ಸಜ್ಜಾಗಿದ್ದು, ಗಮನ ಸೆಳೆಯಿತು. ಕಲಾ ತಂಡಗಳ ಮೂಲಕ ಗ್ರಾಮದ ಪ್ರಮುಖ ರಸ್ತೆಯಲ್ಲಿ ಜ್ಯೋತಿ ರಥಯಾತ್ರೆಯ ಮೆರವಣಿಗೆ ಸಾಗಿತು. ಈ ವೇಳೆ ಕುಂಭ ಮೆರವಣಿಗೆ ಹಾಗೂ ವಿಶೇಷವಾಗಿ 10 ಕ್ಕೂ ಹೆಚ್ಚು ಎತ್ತಿನ ಬಂಡಿಗಳಲ್ಲಿ ಜಾನಪದ ಕಲಾತಂಡಗಳು, ಶಾಲಾ ಕಾಲೇಜು ಮಕ್ಕಳು, ಕನ್ನಡಪ್ರೇಮಿಗಳು ಕನ್ನಡ ಧ್ವಜ ಹಿಡಿದು ವಿವಿಧ ಹೋರಾಟಗಾರರ ವೇಷಭೂಷಣಗಳಲ್ಲಿ ಪಾಲ್ಗೊಂಡಿದ್ದು ನೋಡುಗರ ಗಮನ ಸೆಳೆಯಿತು.
ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಕನ್ನಡ ಪರ, ರೈತ ಪರ ಸಂಘಟನೆ ಮುಖಂಡರು, ಜನಪ್ರತಿನಿಧಿಗಳು, ಅಂಗನವಾಡಿ – ಆಶಾ ಕಾರ್ಯಕರ್ತರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು, ಗ್ರಾ.ಪಂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



