ನಾವು ಯಾರದ್ದೋ ಅಭಿಮಾನಿಗಳಾಗುವ ಮೊದಲು……
ನಾವು ಯಾರದ್ದೋ ಅಭಿಮಾನಿಗಳಾಗುವ ಮೊದಲು ನಮ್ಮೊಳಗಿನ ವ್ಯಕ್ತಿಗೆ ಒಳ್ಳೆಯತನದ ಅಭಿಮಾನಿಗಳಾಗಬೇಕು. ನಾವು ಯಾರದ್ದೋ ಗುಲಾಮರಾಗುವ ಮೊದಲು ನಮ್ಮೊಳಗಿನ ಶ್ರದ್ದೆಗೆ ಭಕ್ತಿಗೆ ಗುಲಾಮರಾಗಬೇಕು. ನಾವು ಯಾರದ್ದೋ ಶತ್ರುಗಳಾಗುವ ಮೊದಲು ನಮ್ಮೊಳಗಿನ ಅಹಂಕಾರ ದುಷ್ಟತನದ ಶತ್ರುಗಳಾಗಬೇಕು. ಆಗಲೇ ನಮ್ಮನ್ನು ನಾವು ಅರಿತಂತೆ ಬೇರೆಯವರಲ್ಲೂ ನಮ್ಮನ್ನು ನಾವು ಅರಿಯಲು ನಮ್ಮನ್ನು ನಾವು ಕಾಣಲು ಸಾಧ್ಯವಾಗುತ್ತದೆ. ನಮ್ಮನ್ನೇ ನಾವು ಅರ್ಥ ಮಾಡಿಕೊಳ್ಳಲಿಲ್ಲವಾದರೆ ಮೊತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯ..
ಮೇಣದಬತ್ತಿಯು ಬೆಳಕು ನೀಡಿ ಉರಿದ ನಂತರವೇ ಗೊತ್ತಾಗಿದ್ದು ನನ್ನನ್ನು ಸುಟ್ಟಿದ್ದು ಮತ್ಯಾರು ಅಲ್ಲ ನನ್ನೊಳಗಿನ ಹಗುರವಾದ ಹತ್ತಿಯ ಸಣ್ಣದಾದ ದಾರ ಎಂದು. ನಮ್ಮ ಬದುಕಿನಲ್ಲಿ ಕೂಡ ಹಾಗೆಯೇ. ಮೊದಲು ನಾನು ಎನ್ನುವುದನ್ನು ಸುಡಬೇಕು ಸಣ್ಣತನವನ್ನು ಹೊರಹಾಕಬೇಕು. ನಮ್ಮ ಜ್ಞಾನದಿಂದ ಮತ್ತೊಬ್ಬರ ಅಂಧಕಾರವನ್ನೋಡಿಸಿ ಬೆಳಕು ಮೂಡಿಸಿದರೆ ಜನ್ಮ ಸಾರ್ಥಕವೆನಿಸುತ್ತದೆ ಅಲ್ಲವೇ..
ಜಗತ್ತಿನಲ್ಲಿ ಎಲ್ಲವೂ ಇದೆ ಒಳಿತು ಕೆಡುಕುಗಳ ಮಹಾಪೂರವೇ ಇದೆ. ಅದರಲ್ಲಿ ನಮ್ಮ ಕಣ್ಣಿಗೆ ಕಾಣುವ ಒಳ್ಳೆಯದೆಲ್ಲವೂ ಬೇರೆಯವರ ಕಣ್ಣಿಗೆ ವ್ಯತ್ಯಾಸವಾಗಿ ಕಾಣಬಹುದು. ಅವರವರ ನಿಲುವು ಅವರವರದ್ದೇ ಮತ್ತು ತರ್ಕಗಳಿಗೆ ನಾವು ತಾಳ ಹಾಕಬಾರದು. ಎಲ್ಲರೂ ಒಳ್ಳೆಯವರೇ ಆಗಿದಿದ್ದರೆ ಜಗತ್ತು ಇಂದು ಸತ್ಯ ಶಾಂತಿ ನೆಮ್ಮದಿ ಪ್ರೀತಿ ಸಹಬಾಳ್ವೆಯಿಂದ ಸುಭೀಕ್ಷವಾಗಿರುತ್ತಿತ್ತು. ಅದರಲ್ಲಿ “ನಾನು ಯಾರು” ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ತುಸು ಕಷ್ಟವಾಗಬಹುದು. ಉತ್ತರ ಸಿಕ್ಕರೆ ಅವರಂಥಹ ಅದೃಷ್ಟಶಾಲಿ ಮತ್ತೊಬ್ಬರಿಲ್ಲ.._
“ಶುಭಃ-ಮುಂಜಾನೆಯ ಶುಭಾಶಯಗಳು……… ಆತ್ಮೀಯರೇ ಎತ್ತರವಾದ ಜಾಗದಲ್ಲಿ ಕುಳಿತ ಮಾತ್ರಕ್ಕೆ ಕಾಗೆ ಯಾವತ್ತಿಗೂ ಗರುಡನಾಗುವುದಿಲ್ಲ. ದೊಡ್ಡ ದೊಡ್ಡ ಸ್ಥಾನದಲ್ಲಿ ಕುಳಿತ ಕೂಡಲೇ ವ್ಯಕ್ತಿ ಎಂದಿಗೂ ದೊಡ್ಡವನಾಗುವುದಿಲ್ಲ.
ದೊಡ್ಡ ಗುಣದಿಂದ ದೊಡ್ಡಸ್ತಿಕೆ ಬರಬೇಕೇ ಹೊರತು ಏರಿ ಕುಳಿತ ಸ್ಥಾನದಿಂದಲ್ಲ. ಹಣವಿದ್ದ ಮಾತ್ರಕ್ಕೆ ಅವರು ಶ್ರೇಷ್ಠ ವ್ಯಕ್ತಿಯಾಗುವುದಿಲ್ಲ ಶ್ರೇಷ್ಠ ಗುಣವಿದ್ದರೆ ಮಾತ್ರ ಏರಿದ ಕುರ್ಚಿಗೊಂದು ಬೆಲೆ ಸಮಾಜದಲ್ಲಿ ಉತ್ತಮವಾದ ನೆಲೆ…”
ಮೊದಲು ನಾನು “ಯಾರು” ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ಬಹುಶಃ ಸಿಗುವುದಿಲ್ಲ ಪರೀಕ್ಷಿಸಿರಿ..
ಎ.ಮೈಕಲ್ ಕೆನಿತ್ ಶಿವಮೊಗ್ಗ.✍



