ಏಕರೂಪದ ಹೊಸ ಸುತ್ತೋಲೆ ಹೊರಡಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿದೆ.

371(ಜೆ) ಅಡಿ ನೇಮಕಾತಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಬಂದಿರುವ ಸುತ್ತೋಲೆಗಳು ಗೊಂದಲದ ಗೂಡಾಗಿವೆ. ಸೆ.27ರಂದು ನಡೆಯುವ 371(ಜೆ) ಕಲಂ ಸಂಪುಟ ಉಪ ಸಮಿತಿ ಸಭೆಯಲ್ಲಿ ಆ ಸುತ್ತೋಲೆಗಳಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಕಲ್ಯಾಣ ಭಾಗದ ಅಭ್ಯರ್ಥಿಗಳಿಗೆ ಶಾಶ್ವತವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮಕೈಗೊಂಡು, ಏಕರೂಪದ ಹೊಸ ಸುತ್ತೋಲೆ ಹೊರಡಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ‘545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2020ರ ಜೂನ್ 6ರ ಸುತ್ತೋಲೆಯಂತೆ ಕಲ್ಯಾಣ ಭಾಗದ ಅಭ್ಯರ್ಥಿಗಳ ಮೀಸಲಾತಿ ಪರಿಗಣಿಸಲು ಸರ್ಕಾರದ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಇದು ಕಲ್ಯಾಣ ಭಾಗದ ಅಭ್ಯರ್ಥಿಗಳ ಪಾಲು ಕಸಿಯುವ ಹುನ್ನಾರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘2020ರ ಜೂನ್ 6ರ ಸುತ್ತೋಲೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ 2023ರ ಫೆ.1ರಂದು ಹೊಸದಾಗಿ ಸುತ್ತೋಲೆ ಹೊರಡಿಸಲಾಗಿತ್ತು. ಅದನ್ನೇ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದ ಸಂಪುಟ ಉಪಸಮಿತಿಯು 2023ರ ಫೆ.1ರ ಸುತ್ತೋಲೆ ಜಾರಿಗೆ ಆದೇಶಿಸಿದ್ದರು. ಆದರೆ, 2023ರ ಫೆ.1ರ ಸುತ್ತೋಲೆಯನ್ನು ಕೆಎಟಿ ರದ್ದುಗೊಳಿಸಿತ್ತು. ಅದನ್ನೆ ಪರಿಗಣಿಸಿ ಹಿರಿಯ ಅಧಿಕಾರಿಗಳು ಇದೀಗ 2020ರ ಸುತ್ತೋಲೆಯಂತೆ ನೇಮಕಾತಿಗೆ ಮುಂದಾಗಿದ್ದರು. ಈ ನಡುವೆ, ಕೆಎಟಿ ಆದೇಶಕ್ಕೆ 2024ರ ಆಗಸ್ಟ್ 8ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದನ್ನು ಅಧಿಕಾರಿಗಳು ಮರೆಮಾಚಿ, ಕಲ್ಯಾಣಕ್ಕೆ ಸಿಗುವ ಹುದ್ದೆಗಳನ್ನು ಕಿತ್ತುಕೊಳ್ಳುವ ಷಡ್ಯಂತ್ರ ನಡೆಸಿದ್ದರು’ ಎಂದು ದಸ್ತಿ ಆರೋಪಿಸಿದರು.



